ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಜ.೨೬ :
ಬ್ರಹ್ಮಾವರ, ಜ.೨೬: ಕೋಟತಟ್ಟು ಗ್ರಾ.ಪಂ. ನೇತೃತ್ವದಲ್ಲಿ ಡಾ.ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಪ್ರತಿಷ್ಠಾನ ಕೋಟ ಹಾಗೂ ಕರಾವಳಿ ನಿವೃತ್ತ ವಾಯುಸೇನಾ ಯೋಧರ ಸಂಘ (ಕಾವ್ಯ) ಆಶ್ರಯದಲ್ಲಿ ಕೋಟ ಕಾರಂತ ಕಲಾಭವನದಲ್ಲಿ ಜ.೨೬ರಂದು ಯೋಧರೊಂದಿಗೆ ನಡಿಗೆ, ನಿವೃತ್ತ ಯೋಧರಿಗೆ ಗೌರವ ಕಾರ್ಯಕ್ರಮ ಜರಗಿತು.
ಹುತಾತ್ಮ ಯೋಧ ಅನೂಪ್ ಪೂಜಾರಿಯವರ ಪತ್ನಿ ಮಂಜುಶ್ರೀ ಜಾಥಕ್ಕೆ ಚಾಲನೆ ನೀಡಿದರು. ಈ ಸಂದರ್ಭ ನೂರಾರು ಸಂಖ್ಯೆಯ ನಿವೃತ್ತ ಯೋಧರು, ಸೇನಾ ತರಬೇತಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು, ಕೋಟ ಅಮೃತೇಶ್ವರೀ ದೇಗುಲದಿಂದ ಕಾರಂತ ಕಲಾಭವನದ ತನಕ ಜಾಥ ನಡೆಸಿದರು. ಅನಂತರ ಇಲ್ಲಿನ ವಿಗ್-೨೧ ಯುದ್ಧ ವಿಮಾನದ ಸಮೀಪ ಗಣರಾಜ್ಯೋತ್ಸವಪ್ರಯುಕ್ತ ಧ್ವಜಾರೋಹಣ ನೆರವೇರಿಸಲಾಯಿತು.

ಅನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಗ್-೨೧ ಯುದ್ಧ ವಿಮಾನದಲ್ಲಿ ಸೇವೆ ಸಲ್ಲಿಸಿದ ವಾರಂಟ್ ಆಫೀಸರ್ ಶ್ರೀಧರ ಭಟ್, ಹಿರಿಯ ಅಧಿಕಾರಿಗಳಾದ ವ್ಯಾಸರಾಜ್, ಮೋಹನ್ ದಾಸ್ ಶೆಟ್ಟಿ, ವಿಕ್ಟರ್, ಸುನಿಲ್ ಶೆಣೈ, ಶಿವಪ್ರಸಾದ್, ಸುಧಾಕರ ದೇವಾಡಿಗ,ಸುಭಾಶ್ ಶಾಸ್ತ್ರಿ, ಶ್ರೀನಿವಾಸ ಗಾಣಿಗ, ಯಶವಂತ ಶೆಟ್ಟಿರವರನ್ನು ಗೌರವಿಸಲಾಯಿತು.
ಉದ್ಯಮಿ ಬಂಜಾರ ಡಾ.ಕೆ. ಪ್ರಕಾಶ್ ಶೆಟ್ಟಿ ಸಮ್ಮಾನ ನೆರವೇರಿಸಿ ಶುಭ ಹಾರೈಸಿದರು.

ನಿವೃತ್ತ ಯೋಧರ ಪರವಾಗಿ ನಿವೃತ್ತ ಮೇಜರ್ ಜನರಲ್ ಎಮ್.ವಿ.ಭಟ್, ರಮೇಶ್ ಕಾರ್ಣಿಕ್, ಅತುಲ್ ಕುಮಾರ್ ರಸ್ತೋದಿ ಮಾತನಾಡಿದರು.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಮಿಗ್ ೨೧ ನೀಡುವಂತೆ ಸುಮಾರು ೧೦ ವರ್ಷಗಳ ಹಿಂದೆ ಹಿಂದಿನ ರಕ್ಷಣಾ ಸಚಿವ ಮನೋಹರ್ ಪರಿಕರ್ರವರಲ್ಲಿ ಕೋರಿಕೊಳ್ಳಲಾಗಿತ್ತು. ನಂತರ ನಿರ್ಮಲ ಸೀತಾರಾಮನ್ ಹಾಗೂ ರಾಜನಾಥ ಸಿಂಗ್ರವರಲ್ಲಿ ಮಾತನಾಡಿ ಈ ಮಿಗ್ ೨೧ ವಿಮಾನವನ್ನು ಇಲ್ಲಿ ತಂದು ಜೋಡಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ೬೬ ಸಮೀಪದ ಕಾರಂತ ಥೀಮ್ ಪಾರ್ಕ್ ಹತ್ತಿರ ಇರಿಸಿರುವುದರಿಂದ ಸಾಕಷ್ಟು ಜನರು ಇಲ್ಲಿಗಾಗಮಿಸಿ ವಿಮಾನವನ್ನು ನೋಡಿ ಹೋಗುತ್ತಿದ್ದಾರೆ ಎಂದರು.

ಉದ್ಯಮಿ ಸಂಪತ್ ಕುಮಾರ್ ಶೆಟ್ಟಿ ಮಾತನಾಡಿ ಸೈನಿಕರ ತ್ಯಾಗದಿಂದ ನಾವೆಲ್ಲ ನೆಮ್ಮದಿಯ, ಸುಂದರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಶ್ರೀನಿವಾಸ ಪೂಜಾರಿಯವರು ಮಿಗ್ ೨೧ ತರುವುದರ ಮೂಲಕ ರಾಜ್ಯ ವ್ಯಾಪ್ತಿಯಲ್ಲಿ ಕೋಟದ ಊರು ಪಸರಿಸುವಂತೆ ಮಾಡಿದ್ದಾರೆ. ಯುವ ಜನತೆಗೆ ಯಶಸ್ಸು ಸಿಗಬೇಕಾದಲ್ಲಿ ಅವರು ಮೊದಲು ಕನಸು ಕಾಣಬೇಕು. ಆತ್ಮವಿಶ್ವಾಸದೊಂದಿಗೆ ಕಠಿಣ ಪರಿಶ್ರಮ ಹಾಕಬೇಕು. ಹಾಗಾದಾಗ ಯಶಸ್ಸು ಖಂಡಿತಾ ಲಭಿಸುತ್ತದೆ. ದೊಡ್ಡ ಕನಸ್ಸನ್ನು ಕಂಡಿರುವ ಯಾವ ವ್ಯಕ್ತಿಯೂ ಜೀವನದಲ್ಲಿ ಸೋತ ಉದಾಹರಣೆ ಇಲ್ಲ ಎಂದರು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕುಂದಾಪುರ ಉಪ ವಿಭಾಗಧಿಕಾರಿ ರಶ್ಮಿ, ಶ್ರೀಕೃಷ್ಣ ಆಗ್ರೋ ಇಂಡಸ್ಟ್ರೀಸ್ ಮಾಲಕ, ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ, ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಸತೀಶ್ ಕುಂದರ್, ಕೋಟ ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಕಾರಂತ ಭವನ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಇದ್ದರು. ಹುತಾತ್ಮ ಯೋಧ ಅನೂಪ್ ಪೂಜಾರಿಯವರ ಪತ್ನಿ ಮಂಜುಶ್ರೀಯವರನ್ನು ಸನ್ಮಾನಿಸಲಾಯಿತು.
ಕಾರಂತ ಪ್ರತಿಷ್ಟಾನದ ಗೌರವಾಧ್ಯಕ್ಷ ಉದ್ಯಮಿ ಆನಂದ್ ಕುಂದರ್ ಸ್ವಾಗತಿಸಿ, ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತಾವಿಕ ಮಾತನಾಡಿದರು. ನಿವೃತ್ತ ಯೋಧ ಜಾರ್ಜೆಡ್ಡು ಶ್ರೀನಿವಾಸ ಗಾಣಿಗ ನಿವೃತ್ತ ಸೈನಿಕರನ್ನು ಪರಿಚಯಿಸಿದರು. ವಿಜಯಭಟ್ ಕಡೆಕಾರು
ವಂದೇ ಮಾತರಂ ಹಾಡಿದರು.
ಪಿಡಿಓ ರವೀಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.



