ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಕೊಲ್ಲೂರು: ಕುಂದಾಪುರ ತಾಲೂಕಿನ ಇಡೂರು ಕುಂಜ್ಞಾಡಿ ಗ್ರಾಮದ ಜನ್ನಾಲ ಬಳಿಯ ಇಂಬು ಪ್ರದೇಶದಲ್ಲಿ ಪಟ್ಟಾ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ತೋಟದಲ್ಲಿದ್ದ ಅಡಿಕೆ ಸೇರಿದಂತೆ ಇತರೆ ಗಿಡಗಳನ್ನು ಕಿತ್ತು ಹಾನಿಗೊಳಪಡಿಸಿದ ಆರೋಪದಡಿ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜುಲೈ ೧೫, ೨೦೨೬ರಂದು ಬೆಳಿಗ್ಗೆ 8.30 ರ ಸುಮಾರಿಗೆ ಘಟನೆ ನಡೆದಿದ್ದು, ಇಡೂರು ಕುಂಜ್ಞಾಡಿ ಗ್ರಾಮದ ಶ್ರುತಿ (೩೩) ಅವರು ನೀಡಿದ ದೂರಿನ ಪ್ರಕಾರ, ಅವರ ಸಂಬಂಧಿಕರಾದ ಸುಬ್ರಹ್ಮಣ್ಯ, ಸಂಧ್ಯಾ ಹಾಗೂ ನಾಗರತ್ನಾ ಅವರು ಪಟ್ಟಾ ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ ತೋಟದಲ್ಲಿದ್ದ ಅಡಿಕೆ ಹಾಗೂ ಇತರೆ ಗಿಡಗಳನ್ನು ಕಿತ್ತು ಸುಮಾರು ೨,೦೦೦ ಮೌಲ್ಯದ ನಷ್ಟ ಉಂಟುಮಾಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಶ್ರುತಿ ಅವರು ಆಕ್ಷೇಪ ವ್ಯಕ್ತಪಡಿಸಿದಾಗ ಆರೋಪಿ ಸುಬ್ರಹ್ಮಣ್ಯ ತಡೆದಿದ್ದಾನೆ. ಬಳಿಕ ಅವರು ಕೂಗಿಕೊಂಡಾಗ ಸ್ಥಳಕ್ಕೆ ಬಂದ ಅಶೋಕ ಭಂಡಾರಿ ಅವರಿಗೆ ಆರೋಪಿ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ದೂರಿನ ಆಧಾರದ ಮೇಲೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಕಲಂ ೩೨೯(೩), ೧೨೬(೨), ೩೫೨, ೩೫೧(೨), ೩೨೪(೪) ಹಾಗೂ ೩(೫)ರಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



