ಉಡುಪಿ ಮಿತ್ರ ಪತ್ರಿಕೆ ಸುದ್ಧಿ:
ಬ್ರಹ್ಮಾವರ, ಮೇ.4 : ಮೇ.6 ರಂದು ಬೆಳಿಗ್ಗೆ 10ಕ್ಕೆ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಬಾರಕೂರಿಗೆ ಆಗಮಿಸಲಿದ್ದಾರೆ ಎಂದು ಬಾರಕೂರು ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ತಿಳಿಸಿದರು. ಅವರು ಮೇ4ರಂದು ಬ್ರಹ್ಮಾವರದ ಗಜಾನನ ಭವನದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಿ ಬಾರಕೂರು ಪ್ರಸಿದ್ಧ ಪ್ರವಾಸೋದ್ಯಮ ಸ್ಥಳವಾಗಿದ್ದು ಇಲ್ಲಿ 365 ದೇವಾಲಯ ಗಳಿವೆ. ಸಾಕಷ್ಟು ಕೆರೆಗಳಿವೆ. ಸಾವಿರಾರು ವರ್ಷಗಳಿಂದ ರಾಜ ಮಹಾರಾಜರು ಆಳ್ವಿಕೆ ನಡೆಸಿದ ಕುರುಹುಗಳಿವೆ. ಈ ಬಾರಕೂರಿನ ಅಭಿವೃದ್ಧಿಯಾಗಬೇಕು. ಈ ಬಗ್ಗೆ ಸಚಿವರಲ್ಲಿ ಚರ್ಚಿಸಿದಾಗ ಪ್ರವಾಸೋದ್ಯಮ ಸಚಿವರು ಖುದ್ದಾಗಿ ಬಂದು ಇಲ್ಲಿನ ಅಭಿವೃದ್ಧಿಯ ಬಗ್ಗೆ ಪರಿಶೀಲನೆ ಮಾಡಿ ಅಭಿವೃದ್ಧಿಯ ಬಗ್ಗೆ ಇಲ್ಲಿಯೇ ಚರ್ಚಿಸುವುದಾಗಿ ತಿಳಿಸಿದ್ದಾರೆ. ಮೇ 6 ರಂದು ಸಚಿವರು ಪಂಚಲಿಂಗೇಶ್ವರ ದೇವಸ್ಥಾನ, ಪುಷ್ಕರಣಿಗಳು ಮತ್ತು ಕೋಟೆಗಳನ್ನು ವೀಕ್ಷಸಲಿದ್ದಾರೆ ಎಂದರು.

ಪ್ರವಾಸೋದ್ಯಮ ಇಲಾಖೆಯ ಡೆಪ್ಯುಟಿ ಕಮೀಷನರ್ ರವರು ಬಾರಕೂರಿನ ಅಭಿವೃದ್ದಿಯ ಬಗ್ಗೆ ನೀಲ ನಕಾಶೆ ಸಿದ್ದಪಡಿಸಿ ಮಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮುಖ್ಯ ಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳವರ ಸಮ್ಮುಖದಲ್ಲಿ ವಿವರಿಸಿದ್ದಾರೆ ಎಂದರು.
ವಸಂತ ಗಿಳಿಯಾರ್ ಮಾತನಾಡಿ ಪಂಚಲಿಂಗೇಶ್ವರ ದೇವರು ಬಾರಕೂರು ಸೀಮೆಯ ಪಟ್ಟದ ದೇವರಾಗಿದ್ದು ಸಾವಿರಾರು ವರ್ಷಗಳ ಇತಿಹಾಸವಿದ್ದು ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಗಜಪೃಷ್ಟಾಕಾರದಲ್ಲೇ ಪುನರ್ ನಿರ್ಮಾಣಗೊಳ್ಳಲಿದೆ ಎಂದರು.
ಬಾರಕೂರು ಏಕನಾಥೇಶ್ವರೀ ದೇವಸ್ಥಾನದ ಟ್ರಸ್ಟಿ ಹಾಗೂ ಉಪಾಧ್ಯಕ್ಷರಾದ ಬಿ.ಜನಾರ್ದನ ದೇವಾಡಿಗ ಮಾತನಾಡಿ ಪಂಚಲಿಂಗೇಶ್ವರ ದೇವರು ಸಮಗ್ರ ತುಳುನಾಡಿಗೆ ಸೀಮೆ ದೇವರಾಗಿದ್ದು ಜೀರ್ಣೋದ್ಧಾರದ ಸಂದರ್ಭ ತುಳುನಾಡಿನ ಸಮಸ್ತರು ಜೀರ್ಣೋದ್ಧಾರದಲ್ಲಿ ಭಾಗವಹಿಸಬೇಕೆಂದರು.
ಪತ್ರಿಕಾಗೋಷ್ಟಿಯಲ್ಲಿ ಸುದೇಶ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಶ್ರೀನಿವಾಸ ಶೆಟ್ಟಿ, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಶ್ರೀನಿವಾಸ ಶೆಟ್ಟಿ ಉಪಸ್ಥಿತರಿದ್ದರು.



