udupimitra.in
  • September 8, 2026
  • Last Update September 7, 2026 5:31 pm
  • Brahmavara

ಸುಜ್ಞಾನ ಎಜುಕೇಶನಲ್‌ ಟ್ರಸ್ಟ್‌ ನಲ್ಲಿ ‘ಗುರುವಂದನಾ’ ಕಾರ್ಯಕ್ರಮ: ಸಮಯದ ಮೌಲ್ಯ, ಸಂಸ್ಕಾರ ಮತ್ತು ಗುರಿಯ ಮಹತ್ವ ಸಾರಿದ ಗಣ್ಯರು

ಸುಜ್ಞಾನ ಎಜುಕೇಶನಲ್‌ ಟ್ರಸ್ಟ್‌ ನಲ್ಲಿ ‘ಗುರುವಂದನಾ’ ಕಾರ್ಯಕ್ರಮ: ಸಮಯದ ಮೌಲ್ಯ, ಸಂಸ್ಕಾರ ಮತ್ತು ಗುರಿಯ ಮಹತ್ವ ಸಾರಿದ ಗಣ್ಯರು

ಉಡುಪಿಮಿತ್ರ ವೆಬ್‌ಸೈಟ್ ಸುದ್ಧಿ :

ಕುಂದಾಪುರ: ವಿದ್ಯಾರ್ಥಿ ಜೀವನದಲ್ಲಿ ಸಮಯದ ಬಳಕೆ, ನೈತಿಕ ಮೌಲ್ಯ ಹಾಗೂ ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾದದ್ದು ಎಂಬುದನ್ನು ನೆನಪಿಸುವ ನಿಟ್ಟಿನಲ್ಲಿ ಸುಜ್ಞಾನ ಎಜುಕೇಶನಲ್‌ ಟ್ರಸ್ಟ್‌ ನ ಸುಜ್ಞಾನ ಪದವಿಪೂರ್ವ ಕಾಲೇಜು, ವಿದ್ಯಾರಣ್ಯ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಾಗೂ ಗ್ಲೋಬಲ್ ಸ್ಕೂಲ್ ಜಂಟಿ ಆಶ್ರಯದಲ್ಲಿ 2026ನೇ ಸಾಲಿನ ಶಿಕ್ಷಕರ ದಿನಾಚರಣೆ ಅಂಗವಾಗಿ ಅತ್ಯಂತ ಅರ್ಥಪೂರ್ಣವಾಗಿ “ಗುರುವಂದನಾ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಗೌರವ ಗುರುವಂದನೆ ಸ್ವೀಕರಿಸಿ ಮಾತನಾಡಿದ ಪ್ರಸಿದ್ಧ ನಿವೃತ್ತ ಶಿಕ್ಷಕರು ಯಕ್ಷಗಾನ ಕಲಾರಂಗ ಉಡುಪಿಯ ಕಾರ್ಯದರ್ಶಿಗಳಾದ ಮುರಲಿ ಕಡೇಕಾರ್‌ ಅವರು, “ಇಂದಿನ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳ ಮನಸ್ಸನ್ನು ವಿಚಲಿತಗೊಳಿಸುವ, ದಾರಿ ತಪ್ಪಿಸುವ ಹತ್ತಾರು ಆಕರ್ಷಣೆಗಳಿವೆ. ಇವೆಲ್ಲವನ್ನೂ ಮೀರಿ ಬೆಳೆಯುವ ಮನೋಭಾವ ನಿಮ್ಮದಾಗಬೇಕು. ಬದುಕಿನಲ್ಲಿಕಳೆದುಹೋದ ಸಮಯವನ್ನು ಯಾವುದೇ ಕಾರಣಕ್ಕೂ ಮರಳಿ ಪಡೆಯಲು ಸಾಧ್ಯವಿಲ್ಲ. ಜೀವನದ ಪ್ರತಿ ನಿಮಿಷ ಮತ್ತು ಗಂಟೆಯೂ ಅತ್ಯಂತ ಅಮೂಲ್ಯ. ಈ ಸತ್ಯವನ್ನು ಅರಿತು ಯಾರು ಶ್ರದ್ಧೆಯಿಂದ ಅಭ್ಯಾಸ ಮಾಡುತ್ತಾರೋ ಅವರ ವಿದ್ಯಾರ್ಥಿ ಜೀವನ ಖಂಡಿತವಾಗಿಯೂ ಸಫಲವಾಗುತ್ತದೆ,” ಎಂದು ಕಿವಿಮಾತು ಹೇಳಿದರು.

ಮುಂದುವರಿದು ಮಾತನಾಡಿದ ಅವರು, “ವಿದ್ಯಾರ್ಥಿಗಳ ಬದುಕನ್ನು ಸುಂದರವಾಗಿ ಕಟ್ಟಿಕೊಡುವುದು ಶಿಕ್ಷಕರ ಕರ್ತವ್ಯವಾದರೆ, ಆ ವಿದ್ಯಾರ್ಥಿ ಸಾಧನೆಯ ಶಿಖರಕ್ಕೇರುವುದೇ ಶಿಕ್ಷಕರಿಗೆ ಸಿಗುವ ನಿಜವಾದ ಬಹುಮಾನ. ಮೊಬೈಲ್ ಎಂಬುದು ಬೆಳಕನ್ನೂ ಕೊಡುತ್ತದೆ, ಬೆಂಕಿಯನ್ನೂ ಹಚ್ಚುತ್ತದೆ; ಅದರಿಂದ ಬೆಳಕನ್ನು ಮಾತ್ರ ಸ್ವೀಕರಿಸುವ ಪರಿವೆ ನಿಮಗಿರಬೇಕು. ಇಂದು ನೈತಿಕ ಶಿಕ್ಷಣದ ಕೊರತೆ ಸಮಾಜವನ್ನು ಕಾಡುತ್ತಿದ್ದು, ನಿಜವಾದ ಶಿಕ್ಷಣವು ನಮಗೆ ಸಂಸ್ಕಾರವನ್ನು ನೀಡಬೇಕು. ಯಾರೋ ಸಿನಿಮಾ ನಟರನ್ನೋ, ಕ್ರಿಕೆಟ್ ಆಟಗಾರರನ್ನೋ ರೋಲ್ ಮಾಡೆಲ್ ಮಾಡಿಕೊಳ್ಳುವ ಬದಲು, ನಿಮಗಾಗಿ ಜೀವ ತೇಯುವ ಹೆತ್ತವರನ್ನು ಹಾಗೂ ಸರಿ-ದಾರಿ ತೋರುವ ಶಿಕ್ಷಕರನ್ನು ನಿಮ್ಮ ಆದರ್ಶವಾಗಿಟ್ಟುಕೊಳ್ಳಿ,” ಎಂದು ಕರೆ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಮಾತನಾಡಿ, “ಜೀವನಕ್ಕೊಂದು ಸ್ಪಷ್ಟ ಹಾಗೂ ಉನ್ನತ ಗುರಿ ಅತ್ಯಗತ್ಯ. ನಮ್ಮ ಸಾಂಸ್ಕೃತಿಕ ಬೇರುಗಳು, ಆಚಾರ-ವಿಚಾರಗಳು ಮತ್ತು ಪರಂಪರೆಯನ್ನು ಅರ್ಥೈಸಿಕೊಂಡು ಬದುಕುವುದು ಪ್ರತಿಯೊಬ್ಬ ನಾಗರಿಕನ ಧರ್ಮ. ಇಂತಹ ಗುರುವಂದನಾ ಕಾರ್ಯಕ್ರಮಗಳು ಯುವಜನತೆಯಲ್ಲಿ ನಮ್ಮ ನಾಡಿನ ಸಂಸ್ಕೃತಿಯ ಬಗ್ಗೆ ಗೌರವ ಮೂಡಿಸಲು ನೆರವಾಗುತ್ತವೆ,” ಎಂದು ಶ್ಲಾಘಿಸಿದರು.

ಸಂಸ್ಥೆಯ ಅಧ್ಯಕ್ಷರಾದ ರಮೇಶ್‌ ಶೆಟ್ಟಿ ಅವರು ಮಾತನಾಡಿ, “ಪ್ರತಿವರ್ಷವೂ ನಾವು ಇಂತಹ ಶ್ರೇಷ್ಠ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸುವುದರ ಹಿಂದೆ ಒಂದು ಸ್ಪಷ್ಟ ಉದ್ದೇಶವಿದೆ. ವಿದ್ಯಾರ್ಥಿಗಳು ಇಂತಹ ಮಹನೀಯರ ಬದುಕಿನಿಂದ ಸ್ಪೂರ್ತಿ ಪಡೆದು, ಅವರನ್ನು ತಮ್ಮ ಜೀವನದ ಮಾರ್ಗದರ್ಶಕರನ್ನಾಗಿ ಸ್ವೀಕರಿಸಬೇಕು. ಒಳ್ಳೆಯ ಕೆಲಸ ಮತ್ತು ಸಾಧನೆಯನ್ನು ಈ ಸಮಾಜ ಎಂದಿಗೂ ಗುರುತಿಸುತ್ತದೆ ಎಂಬುದರ ಅರಿವು ವಿದ್ಯಾರ್ಥಿಗಳಿಗಾಗಬೇಕು ಎಂಬುದು ನಮ್ಮ ಉದ್ದೇಶ. ಶಿಕ್ಷಕರು ಸಹ ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ಪ್ರೀತಿಸಿ, ಪ್ರೀತಿಯಿಂದ ತಿದ್ದಿ ತೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು,” ಎಂದು ಆಶಯ ವ್ಯಕ್ತಪಡಿಸಿದರು.

ಸಂಸ್ಥೆಯ ಕಾರ್ಯದರ್ಶಿ ಪ್ರತಾಪ್‌ ಚಂದ್ರ ಶೆಟ್ಟಿ ಅವರು ಮಾತನಾಡಿ, “ವಿಶ್ವದಲ್ಲೇ ಅತ್ಯಂತ ಪವಿತ್ರ ಮತ್ತು ಗೌರವಪೂರ್ವಕ ವೃತ್ತಿಯೆಂದರೆ ಅದು ಶಿಕ್ಷಕ ವೃತ್ತಿ. ಇನ್ನೊಬ್ಬರ ಬದುಕಿಗೆ ಆಕಾರ ಕೊಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಶಿಕ್ಷಕರು ನೀಡುವ ಬುದ್ಧಿಮಾತುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ,” ಎಂದು ಅಭಿಪ್ರಾಯಪಟ್ಟರು.

ಸಂಸ್ಥೆಯ ಖಜಾಂಚಿ ಭರತ್‌ ಶೆಟ್ಟಿ ಅವರು ಮಾತನಾಡಿ, “ನಿಮ್ಮ ಶಿಕ್ಷಣಕ್ಕಾಗಿ ಹೆತ್ತವರು ಪಡುತ್ತಿರುವ ಶ್ರಮ ಹಾಗೂ ಮಾಡುತ್ತಿರುವ ತ್ಯಾಗವನ್ನು ಎಂದಿಗೂ ಮರೆಯಬೇಡಿ. ಮನಸ್ಸಿನಲ್ಲಿ ಏನಾದರೊಂದು ದೊಡ್ಡ ಸಾಧನೆ ಮಾಡಲೇಬೇಕು ಎಂಬ ಛಲ ಹಾಗೂ ಗುರಿ ಇರಬೇಕು,” ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಶಿಕ್ಷಕಿಯರಿಗೆ ಸನ್ಮಾನ:
ಇದೇ ಸಂದರ್ಭದಲ್ಲಿ ಶಾಲಾ-ಕಾಲೇಜಿನಲ್ಲಿ ಸುದೀರ್ಘ ಹಾಗೂ ಶ್ರೇಷ್ಠ ಸೇವೆ ಸಲ್ಲಿಸಿದ ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕಿ ಪ್ರೀತಿ ಚಂದ್ರಶೇಖರ ಹಾಗೂ ಸುಜ್ಞಾನ ಪಿಯು ಕಾಲೇಜಿನ ಉಪನ್ಯಾಸಕಿ ಚರಿಷ್ಮಾ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಿ, ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸುಜ್ಞಾನ ನ್ಯಾಷನಲ್‌ ಪಿಯು ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್‌ ಆಚಾರ್ಯ, ವಿದ್ಯಾರಣ್ಯ ಗ್ಲೋಬಲ್‌ ಸ್ಕೂಲ್‌ನ ಪ್ರಾಂಶುಪಾಲರಾದ ಅನಿತಾ ಕುಮಾರಿ, ಮುಖ್ಯೋಪಾಧ್ಯಾಯರಾದ ಸ್ಪೂರ್ತಿ ಎ., ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸುಜ್ಞಾನ ಪಿಯು ಕಾಲೇಜಿನ ಪ್ರಾಂಶುಪಾಲರಾದ ರಂಜನ್‌ ಬಿ. ಶೆಟ್ಟಿ ಸ್ವಾಗತಿಸಿದರು. ಸಂಸ್ಕೃತ ಉಪನ್ಯಾಸಕ ರಜತ್‌ ಭಟ್‌ ಕಾರ್ಯಕ್ರಮವನ್ನು ನಿರೂಪಿಸಿದರೆ, ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರದೀಪ್‌ ಕುಮಾರ್‌ ಧನ್ಯವಾದ ಸಮರ್ಪಿಸಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page